Thursday, June 25, 2015

ತರಣಿ ಜಲವಾಯುಗಳ ಸಿರಿಯೆನುವನೇ ನರನು(782)

ತರಣಿ ಜಲವಾಯುಗಳ ಸಿರಿಯೆನುವನೇ ನರನು?|
ಸರಿಸಮದೊಳೆಲ್ಲರಿಂಗಿಹ ಪುರುಳು ಪುರುಳೇಂ? ||
ಹೆರರಿಗಿಲ್ಲದೆ ತನ್ನಮಾತ್ರಕಿಹ ಸಿರಿಯೆ ಸಿರಿ |
ತರತಮವೆ ಜನದೆಣಿಕೆ - ಮರುಳ ಮುನಿಯ || (೭೮೨)

(ಸರಿಸಮದೊಳ್+ಎಲ್ಲರಿಂಗೆ+ಇಹ)(ಹೆರರಿಗೆ+ಇಲ್ಲದೆ)(ತನ್ನಮಾತ್ರಕೆ+ಇಹ)(ಜನದ+ಎಣಿಕೆ)

ಸೂರ್ಯ, ನೀರು ಮತ್ತು ಗಾಳಿಗಳನ್ನು ತನಕೆ ದೊರಕಿರುವ ಸಿರಿ, ಸಂಪತ್ತುಗಳೆಂದು ಮನುಷ್ಯನು ಭಾವಿಸುವನೇನು? ಪ್ರತಿಯೊಬ್ಬ ಜೀವಿಗೂ ಸರಿಸಮಾನವಾಗಿ ಸಿಗುವಂತಹ ಸಾರಗಳನ್ನು ಅವನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇತರರಿಗಿರದ ಮತ್ತು ತನಗೆ ಮಾತ್ರ ಇರುವಂತಹ ಸಿರಿ ಸಂಪತ್ತುಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಈ ಬಗೆಯ ಹೆಚ್ಚು ಕಡಿಮೆಗಳನ್ನೇ ಅವನು ಲೆಕ್ಕ ಹಾಕುವನು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Does man consider the sun, water and air as wealth?
Are the precious things that all men equally possess not wealth?
Real wealth is what possesses when all others don’t possess it?
With this perverse view men are busy comparing and contrasting – Marula Muniya (782)
(Translation from "Thus Sang Marula Muniya" by Sri. Narasimha Bhat)

Thursday, June 11, 2015

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು (781)

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು |
ಬೆಂಕಿಯಂ ನರ ಸೋದರರ ನಡುವೆ ತಂದಂ ||
ಅಂಕುರಿಸಿತಂದದರಿನೊಂದಸೂಯಾ ಸ್ಪರ್ಧೆ |
ಸಂಕಟವದನುಪಮವೊ - ಮರುಳ ಮುನಿಯ || (೭೮೧)

(ಪೊಸತು+ಒಂದು)(ಅಂಕುರಿಸಿತು+ಅಂದು+ಅದರಿನ್+ಒಂದು+ಅಸೂಯಾ)(ಸಂಕಟ+ಅದು+ಅನುಪಮವೊ)

ಮೊಟ್ಟಮೊದಲಿಗೆ ನಾಣ್ಯವನ್ನು ಮುದ್ರಿಸಿದವನು (ಟಂಕಕ) ಒಂದು ಹೊಸ (ಪೊಸ) ಬೆಂಕಿಯನ್ನು ಮನುಷ್ಯರ ಸೋದರ ಭಾವಗಳಲ್ಲಿ ತಂದಿಡಲು ಕಾರಣನಾದನು. ಹಣವನ್ನು ಗಳಿಸಲು ಅವತ್ತಿನ ದಿನ ಹೊಟ್ಟೆಕಿಚ್ಚಿ(ಅಸುಯಾ)ನಿಂದ ಕೂಡಿದ ಒಂದು ಸ್ಪರ್ಧೆಯು ಮನುಷ್ಯ ಮನುಷ್ಯರ ನಡುವೆ ಹುಟ್ಟಿತು (ಅಂಕುರಿಸಿತು). ಇದರಿಂದ ಉಂಟಾದ ಸಂಕಟಗಳಿಗೆ ಸಮನಾದ ಬೇರೆ ದುಃಖಗಳೇ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The man who first invented the first coin in human history,
Brought a new fire to burn the hearts of his human brothers,
From money has sprouted the fire of jealousy and cut-throat competition
The affliction it causes is incomparable – Marula Muniya (781)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, June 10, 2015

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ (780)

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ |
ಸ್ವಮತಿಯತ್ನದಿನೆ ನಿಃಸ್ವಾರ್ಥಗುಣ ನಿನಗೆ ||
ಮಮತೆಯಿಂದಾತ್ಮ ಸಂಕೋಚ ನಿರ್ಮಮತೆಯಿಂ- |
ದಮಿತಾತ್ಮ ವಿಸ್ತಾರ - ಮರುಳ ಮುನಿಯ || (೭೮೦)

(ಮಮತೆಯಿಂದ+ಆತ್ಮ)(ನಿರ್ಮಮತೆಯಿಂದ+ಅಮಿತ+ಆತ್ಮ)

ಆಸೆಯನ್ನು ಹುಟ್ಟಿಸಲು ಕಾರಣಕರ್ತಳಾದ(ಕಮನಕಾರಣಿ) ಸೃಷ್ಟಿಯು ಮನುಷ್ಯನಲ್ಲಿ ಸ್ವಾರ್ಥತೆಯನ್ನು ಪೋಷಿಸುತ್ತಾಳೆ. ನಿನ್ನ ಸ್ವಂತ ಬುದ್ಧಿಯ ಉಪಯೋಗದಿಂದ ನೀನು ನಿನ್ನ ನಿಃಸ್ವಾರ್ಥ ಸ್ವಭಾವಗಳನ್ನು ಬೆಳಿಸಿಕೊಳ್ಳಬೇಕು. ಮಮಕಾರದಿಂದ ನಿನ್ನ ಆತ್ಮವು ಕುಗ್ಗಿಹೋಗುತ್ತದೆ. ಮಮಕಾರವಿಲ್ಲದಿರುವುದರಿಂದ ನಿನ್ನ ಆತ್ಮವು ಅಪಾರವಾಗಿ ವಿಸ್ತಾರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature who feeds desire fosters selfishness,
Selfishness is acquired only through hard self-effort,
Contraction of self by attachment and its infinite expansion
Through non-attachment – Marula Muniya (780)
(Translation from "Thus Sang Marula Muniya" by Sri. Narasimha Bhat)

Tuesday, June 9, 2015

ಜೇನು ಕಪ್ಪುರ ಕೇಸರಗಳು ಪಾಲಿನೊಳು (779)

ಜೇನು ಕಪ್ಪುರ ಕೇಸರಗಳು ಪಾಲಿನೊಳು |
ಲೀನ ವಿಶದಗಳಾಗಿ, ನಿರಹಮಹ ಸ್ವಾರ್ಥಂ ||
ಜ್ಞಾನಿ ಹಿತಕರನಿಹನು ಲೋಕಕ್ಕೆ ನಿಃಸ್ವಾರ್ಥ |
ಲೀನ ವಿಶದದ ಬಾಳು - ಮರುಳ ಮುನಿಯ || (೭೭೯)

(ವಿಶದಗಳ್+ಆಗಿ)(ನಿರಹಂ+ಅಹ)(ಹಿತಕರನ್+ಇಹನು)

ಜೇನುತುಪ್ಪ, ಪಚ್ಚ ಕರ್ಪೂರ ಮತ್ತು ಕೇಸರಿಗಳು ಹಾಲಿನಲ್ಲಿ ಬೆರೆತು ಕರಗಿಹೋದರೂ ಸಹ ಆ ಹಾಲನ್ನು ಆಸ್ವಾದಿಸುವವನ ನಾಲಿಗೆಗೆ ಸ್ಪಷ್ಟವಾಗಿ (ವಿಶದ) ಅವುಗಳ ಇರುವಿಕೆಯು ತಿಳಿಯುತ್ತದೆ. ಅದೇ ರೀತಿ ನಿರಹಂಕಾರ (ನಿರಹ) ಮತ್ತು ಸ್ವಾರ್ಥಗಳೂ ಸಹ, ಮನುಷ್ಯ ಜೀವಿಯಲ್ಲಿ ಅಡಗಿದ್ದರೂ ವ್ಯಕ್ತವಾಗುತ್ತಾ ಇರುತ್ತವೆ. ಜ್ಞಾನಿಯಾದರೋ ಸ್ವಾರ್ಥರಹಿತನಾಗಿ ಜಗತ್ತಿಗೇ ಒಳ್ಳೆಯದನ್ನು ಮಾಡುವವನಾಗಿರುತ್ತಾನೆ. ಅವನ ಜೀವನವು ಜಗತ್ತಿನಲ್ಲಿ ಸೇರಿಕೊಂಡು ಹೋಗಿದ್ದರೂ ಸಹ ಅವನ ಸ್ವಭಾವ ಮತ್ತು ಕಾರ್ಯಗಳು ಇತರರಿಗೆ ಸ್ಪಷ್ಟವಾಗಿ ಕಾಣಿಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Honey, camphor and saffron dissolved in milk can’t be seen
But the sweetness and fragrance can be enjoyed,
Similarly the selfishness of a wise a sage gets dissolved and his selfishness only shines
He gives help and happiness to the world – Marula Muniya (778)
(Translation from "Thus Sang Marula Muniya" by Sri. Narasimha Bhat)

Monday, June 8, 2015

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ (778)

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ |
ಬೆಳಕು ನೆರಳಿನ ಬೆರಕೆ ಹುಳಿಸು ಸಿಹಿ ಬೆರಕೆ ||
ತಿಳಿವು ಮಬ್ಬಿನ ಬೆರಕೆ ಕೊಳಕು ಚೊಕ್ಕಟ ಬೆರಕೆ |
ಕಲಿ ಸೈಸಲುಭಯವನು - ಮರುಳ ಮುನಿಯ || (೭೭೮)

(ಜೀವಗತಿ+ಒಳಿತು+ಅಲ್ಲದುಗಳ)(ಸೈಸಲು+ಉಭಯವನು)

ಜೀವನದ ನಡಗೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಬೆರೆತಿರುತ್ತವೆ. ಅದು ಬೆಳಕು ಮತ್ತು ನೆರಳು, ಹುಳಿ ಮತ್ತು ಸಿಹಿ, ತಿಳುವಳಿಕೆ ಮತ್ತು ಅಜ್ಞಾನ, ಮಲಿನ ಮತ್ತು ನೈರ್ಮಲ್ಯ, ಇವುಗಳಂತೆ ಜತೆಗೂಡಿರುತ್ತವೆ. ಈ ಎರಡೂ ಬಗೆಗಳನ್ನು ಸಹಿಸುವುದನ್ನು ಕಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The course of life is a mixture, a mixture of good and evil,
A mixture of light and shade, a mixture of sour and sweetness,
A mixture of knowledge and ignorance, a mixture of the clean and the unclean
Learn to endure both – Marula Muniya (778)
(Translation from "Thus Sang Marula Muniya" by Sri. Narasimha Bhat)

Friday, May 29, 2015

ಗುರುವ ಬಿಡಲೊಲದು ಜನ ಪಿಡಿಯದವನನು ತೀರ (777)

ಗುರುವ ಬಿಡಲೊಲದು ಜನ ಪಿಡಿಯದವನನು ತೀರ |
ಧರಣಿಯಲಿ ನಿಂದಿರದು ಗಗನಕೈದದದು ||
ಅರೆಯದನುಮರೆಯಿದನುಮನುಗೂಡಿಸುತಲೆಂತೊ |
ಚರಿಸುವುದು ಹದವೆಣಿಸಿ - ಮರುಳ ಮುನಿಯ || (೭೭೭)

(ಬಿಡಲ್+ಒಲದು)(ಪಿಡಿಯದು+ಅವನನು)(ನಿಂತು+ಇರದು)(ಗಗನಕೆ+ಐದದು+ಅದು)(ಅರೆಯದನುಂ+ಅರೆಯಿದನುಂ+ಅನುಗೂಡಿಸುತಲ್+ಎಂತೊ)(ಹದ+ಎಣಿಸಿ)

ಜನಗಳು ಗುರುವನ್ನು ಹೇಗೆ ಬಿಡಿಲಾರರೋ, ಅದೇ ರೀತಿ ಅವರು ಅವನನ್ನು ಅತಿಶಯವಾಗಿ ಅನುಸರಿಸಲೂ ಆರರು. ಭೂಮಿಯ ಮೇಲೆ ನಿಂತುಕೊಂಡಿರುವುದಿಲ್ಲ, ಹಾಗೆಂದು ಆಕಾಶ(ಗಗನ)ವನ್ನು ಸೇರುವುದೂ ಇಲ್ಲ. ಅರೆದು ಪುಡಿ ಮಾಡಿರುವ ಮತ್ತು ಅರೆಯದೆ ಪುಡಿಯಾಗದಿರುವ ಎರಡನ್ನೂ ಹೊಂದಿಸಿಕೊಂಡು ಹದವನ್ನು ತಿಳಿದು ಲೋಕದಲ್ಲಿ ವರ್ತಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

People are unable either to leave their Guru or to trust him.
They are unable either to remain on the earth or to fly up in the sky,
Harmonize that half and this half some-how
And move forward with all caution – Marula Muniya (777)
(Translation from "Thus Sang Marula Muniya" by Sri. Narasimha Bhat)

Wednesday, May 20, 2015

ಸಂದೇಹವಿರಲಿ ಸಯ್ತಿರದೆ ಕುದಿಯುತ್ತಿರಲಿ (776)

ಸಂದೇಹವಿರಲಿ ಸಯ್ತಿರದೆ ಕುದಿಯುತ್ತಿರಲಿ |
ಹಿಂದು-ಮುಂದುಗಳ ನೆನೆದದು ಬೆದಕುತಿರಲಿ ||
ಎಂದೊ ಬೇಸಗೆಯಲೊಂದುದಿನ ಮಳೆ ಬರುವಂತೆ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೬)

(ಸಂದೇಹ+ಇರಲಿ)(ಸಯ್ತು+ಇರದೆ)(ಕುದಿಯುತ್ತ+ಇರಲಿ)(ನೆನೆದು+ಅದು)(ಬೆದಕುತ+ಇರಲಿ)(ಬೇಸಗೆಯಲಿ+ಒಂದುದಿನ)

ಮನಸ್ಸಿನಲ್ಲಿ ಶಂಕೆಗಳಿರಲಿ. ಆ ಸಂದೇಹಗಳು ಸಮಾಧಾನವನ್ನು (ಸುಯ್ತು) ಕಾಣದೆ ಕುದಿಯುತ್ತಲೇ ಇರಲಿ. ಹಿಂದು ಮತ್ತು ಮುಂದುಗಳನ್ನು ಜ್ಞಾಪಿಸಿಕೊಂಡು ಆ ಸಂದೇಹಗಳು ತಡಕಾಟದಲ್ಲಿರಲಿ (ಬೆದುಕುತಿರಲಿ). ಬೇಸಿಗೆಯ ದಿನಗಳಲ್ಲಿ ಎಂದೋ ಒಂದು ದಿವಸ ಮಳೆಯು ಬಂದು ಧರೆಯನ್ನು ತಂಪಾಗಿಸುವಂತೆ, ಸತ್ಯ(ತಥ್ಯ)ವೂ ಒಂದು ದಿನ ಎದುರಿಗೆ ಬಂದು ಶಂಕೆಗಳಿಗೆ ಸಮಾಧಾನವನ್ನು (ತಣಿಪು) ನೀಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let there be doubt, let it boil in deep discontent,
Let it probe about the past and the future and explore them.
Like the rain that fails on someday in hot summer
Truth will rain down and cool the earth – Marula Muniya (776)
(Translation from "Thus Sang Marula Muniya" by Sri. Narasimha Bhat) #dvg,#kagga

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? (775)

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? |
ಬಂಧವಿರದಾಗಾರ ಗಾಳಿಯೆಡೆ ಸೊಡರು ||
ದ್ವಂದ್ವವಾದದಿನನಾವೃತವಾಗೆ ಸೂಕ್ಷ್ಮಕಣ್ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೫)

(ಮೊದಲ್+ಇರದ)(ನಂಬುಗೆ+ಅದು+ಏಂ)(ಬಂಧವಿರದ+ಆಗಾರ)(ಗಾಳಿ+ಎಡೆ)(ದ್ವಂದ್ವವಾದದಿನ್+ಅನಾವೃತ+ಆಗೆ)

ಮೊಟ್ಟಮೊದಲಿನಲ್ಲಿ ಸಂದೇಹವೇ ಇರದಂತಹ ನಂಬಿಕೆಗಳು ಎಂತಹ ಅಡಿಗಲ್ಲಾದೀತು? ಅದು ಸರಿಯಾಗಿ ಕಟ್ಟದಿರುವ (ಬಂಧ) ಮನೆ (ಆಗಾರ) ಮತ್ತು ಗಾಳಿಯಿರುವ ಜಗದಲ್ಲಿಟ್ಟಿರುವ ದೀಪ(ಸೊಡರ್)ದಂತೆ ಕುಸಿದು, ಆರಿಹೋಗುತ್ತದೆ. ಸೂಕ್ಷ್ಮವಾಗಿರುವ ಕಣ್ಣುಗಳು ದ್ವಂದ್ವ ತರ್ಕಗಳಿಂದ ದೂರ ಸರಿದಾಗ (ಅನಾವೃತ) ಆ ಕಣ್ಣುಗಳ ಮುಂದೆ ಸತ್ಯ(ತಥ್ಯ)ವು ಬಂದು ನಿಂತುಕೊಳ್ಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Belief should grow after genuine doubt. If not it is similar to a house
Build without foundation and an open lamp exposes to wind
When your subtle eye is uncovered by opposing arguments,
Truth will stand face to face – Marula Muniya (775)
(Translation from "Thus Sang Marula Muniya" by Sri. Narasimha Bhat)

Monday, May 18, 2015

ಸಂದೇಹವೇಂ ಮನದೊಳ್? ಇರಲಿ, ಕುದಿಗೊಂಡಿರಲಿ (774)

ಸಂದೇಹವೇಂ ಮನದೊಳ್? ಇರಲಿ, ಕುದಿಗೊಂಡಿರಲಿ |
ಬೆಂದಲ್ಲದಿಳಿದೀತೆ ತಿಳಿವಿನೊಳಸಾರ ||
ತಂದೆ ನಿಶ್ಚಯಕೆ ಸಂಶಯ ಬುದ್ಧಿಮಥನದಿಂ |
ಬಂದಪುದು ತತ್ತ್ವಸುಧೆ - ಮರುಳ ಮುನಿಯ || (೭೭೪)

(ಕುದಿಗೊಂಡು+ಇರಲಿ)(ಬೆಂದ್+ಅಲ್ಲದೆ+ಇಳಿದೀತೆ)(ತಿಳಿವಿನ್+ಒಳಸಾರ)(ಬಂದ್+ಅಪುದು)

ನಿನ್ನ ಮನಸ್ಸಿನಲ್ಲಿ ಶಂಕೆಗಳುಂಟೋ? ಅದು ಹಾಗೆ ಕುದಿಯುತ್ತಾ ಇರಲಿ ಬಿಡು. ಸರಿಯಾಗಿ ಪಕ್ವವಾದ ಹೊರತು ತಿಳುವಳಿಕೆಗೆ ಒಳಗಿನ ಸಾರ ಅಂತರಂಗಕ್ಕೆ ಇಳಿಯಲಾರದು. ತಾನು ಗೊತ್ತು ಮಾಡಿಕೊಂಡಿರುವ ನಿರ್ಣಯಕ್ಕೆ ಸಂದೇಹಗಳುಂಟಾದಾಗ, ಬುದ್ಧಿಯನ್ನುಪಯೋಗಿಸಿ ಕೂಲಂಕುಶವಾಗಿ ವಿಚಾರ ಮಾಡುವುದರಿಂದ ಪರಮಾತ್ಮನ ತತ್ತ್ವಾಮೃತ(ಸುಧೆ)ಯು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the doubt lurking in your mind? Let it boil well
Will the essence of wisdom flow out unless it is baked well?
Doubt is the father of decision; the ambrosia of Truth comes out
Only when you churn your intellect well – Marula Muniya
(Translation from "Thus Sang Marula Muniya" by Sri. Narasimha Bhat) #dvg,#kagga

Thursday, May 14, 2015

ಮನುಜಯಂತ್ರವ ಪೋಲ್ವ ಯಂತ್ರವಿನ್ನೆಲ್ಲಿಹುದು? (773)

ಮನುಜಯಂತ್ರವ ಪೋಲ್ವ ಯಂತ್ರವಿನ್ನೆಲ್ಲಿಹುದು? |
ಮನದವೊಲು ಗರಗಸದ ಚಕ್ರವಿನ್ನೆಲ್ಲಿ? ||
ಅನಿಲಗತಿಯಿಂ ವಿಚಲ ತರವಲ್ತೆ ಮನದ ಗತಿ |
ಮನ ಕೊಂಕು ಜನ ಡೊಂಕು - ಮರುಳ ಮುನಿಯ || (೭೭೩)

(ಯಂತ್ರ+ಇನ್ನೆಲ್ಲಿ+ಇಹುದು)(ಚಕ್ರ+ಇನ್ನೆಲ್ಲಿ)

ಮನುಷ್ಯನ ರಚನೆಯನ್ನು ಹೋಲುವ ಬೇರೆ ಯಾವ ಯಂತ್ರಗಳು ಎಲ್ಲಿವೆ? ಮನುಷ್ಯನ ಗರಗಸದಂತಿರುವ ಮನಸ್ಸಿನ ಚಕ್ರ ಇನ್ನೆಲ್ಲಾದರೂ ಉಂಟೇನು? ಮನಸ್ಸಿನ ಚಲನೆಯೂ ಗಾಳಿಯ ಚಲನೆಯಂತೆ ಚಂಚಲ(ವಿಚಲ)ವಲ್ಲವೇ? ಮನಸ್ಸು ವಕ್ರವಿದ್ದಂತೆ, ಜನಗಳೂ ವಕ್ರ ಸ್ವಭಾವದವರಾಗಿದ್ದಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is the machine comparable to human machine?
Where is the wheel-saw similar to human mind?
Is not mind’s velocity far more than that of the wind?
When mind is crooked man becomes wicked – Marula Muniya (773)
(Translation from "Thus Sang Marula Muniya" by Sri. Narasimha Bhat)