Showing posts with label ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ. Show all posts
Showing posts with label ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ. Show all posts

Monday, August 1, 2011

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ (46)

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ |
ಲೇಶದೊಳಗರಸುವೆಯ ರಾಶಿಯಮಿತವನು ? ||
ರಾಶಿಯೆಲ್ಲವ ಕಾಣ್ಬೊಡದರೊಳಗೆ ಕರಗಿ ಬೆರೆ |
ನಾಶವಕ್ಕೆ ಪೃಥಕ್ತ್ವ - ಮರುಳ ಮುನಿಯ || (೪೬)



‎(ಈಶನ+ಇಚ್ಛೆ)(ನೀನು+ಅದರ+ಒಳು+​ಒಂದು)(ಲೇಶದ+ಒಳಗೆ+ಅರಸುವೆಯ)
(ರಾಶಿಯ+ಅಮಿತವನು)(ಕಾಣ್ಬೊಡೆ+ಅ​ದರ+ಒಳಗೆ)

ಪರಮಾತ್ಮನ ಅಪೇಕ್ಷೆ(ಇಚ್ಛೆ)ಯಿಂದ ಈ ಬ್ರಹ್ಮಾಂಡ ಸಾಗರದ ನಿರ್ಮಾಣವಾಗಿದೆ. ನೀನು ಆ ಸಾಗರದ ಒಂದು ಸಣ್ಣ ಕಣ ಮಾತ್ರ. ಹೀಗಿರುವಾಗ, ಈ ಸ್ವಲ್ಪ(ಲೇಶ)ದರಲ್ಲಿ ನೀನು ರಾಶಿಯ ಅಪಾರತೆ(ಅಮಿತ)ಯನ್ನು ಹುಡುಕು(ಅರಸು)ವೆಯೇನು? ಇದು ಅಸಾಧ್ಯವಾದ ಕೆಲಸ. ನೀನಾದರೋ ಒಂದು ಕಣ. ಅದು ಅಪಾರ ರಾಶಿ. ಈ ಸಂಪೂರ್ಣ ರಾಶಿಯನ್ನು ಕಾಣಬೇಕೆಂದರೆ, ನೀನು ಅದರ ಒಳಗೆ ಕರಗಿ ಬೆರೆತು ಹೋಗು. ಯಾವಾಗ ನೀನು ಅದರ ಒಂದು ಭಾಗವಾಗುವೆಯೋ ಆವಾಗ ನೀನು ರಾಶಿಯ ಅಪಾರತೆಯನ್ನು ಕಾಣಲಿಕ್ಕಾಗುತ್ತದೆ. ಈ ಕರಗುವಿಕೆಯಲ್ಲಿ ನಿನಗೆ ಇನ್ನೂ ಒಂದು ಲಾಭ ಉಂಟು. ಅದು, ನಿನ್ನ ಅಹಂ ಮತ್ತು ಬೇರೆತನದ ಅರಿವು(ಪೃಥಕ್ತ್ವ) ನಾಶವಾಗಲಿಕ್ಕೆ ಕಾರಣವಾಗುತ್ತದೆ.