Monday, July 18, 2011

ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ (39)

ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ |
ಧವನ ನೆನೆದಲೆದಾಡುತಿರ‍್ಕೆ ದಮಯಂತಿ ||
ಕುವರನಳಿಯೆ ಸುಭದ್ರೆ ಫಲುಗುಣರ್‌ಗೋಳಿಡುಗೆ |
ಶಿವನಿಗದು ನವರುಚಿಯೊ - ಮರುಳ ಮುನಿಯ || (೩೯)

(ಹರಿಶ್ಚಂದ್ರನು+ಅಳುತ+ಇರ‍್ಕೆ)(ನೆನೆದು+ಅಲೆದಾಡುತ+ಇರ‍್ಕೆ)(ಕುವರನು+ಅಳಿಯೆ)
(ಫಲುಗುಣರ್+ಗೋಳ್+ಇಡುಗೆ)(ಶಿವನಿಗೆ+ಅದು)

ತನಗೆ ಒದಗಿದ ದುರ್ದಶೆಯನ್ನು ಕುರಿತು ಪರಿತಪಿಸು(ತವಿಸು)ತ್ತಿದ್ದ ರಾಜಾ ಹರಿಶ್ಚಂದ್ರನನ್ನು ಕಂಡು ಅವನ ಪತ್ನಿ ರಾಣಿ ಚಂದ್ರಮತಿಯೂ ಅಳುತ್ತಿರುವುದು, ಮರೆಯಾದ ಪತಿ(ಧವ) ನಳ ಮಹಾರಾಜನನ್ನು ಸ್ಮರಿಸಿಕೊಂಡು ಅವನ ಪತ್ನಿ ದಮಯಂತಿಯು ಅವನನ್ನು ಹುಡುಕಿಕೊಂಡು ಅಲೆದಾಡುತ್ತಿರುವುದು, ತಮ್ಮ ತನಯನಾದ ಅಭಿಮನ್ಯುವು, ಚಕ್ರವ್ಯೂಹದಿಂದ ಹೊರಬರಲಾಗದೆ ಕುರುಕ್ಷೇತ್ರ ಯುದ್ಧದಲ್ಲಿ ಮರಣವನ್ನಪ್ಪಲು, ತಾಯಿ ತಂದೆಯರಾದ ಸುಭದ್ರೆ ಮತ್ತು ಅರ್ಜುನ(ಫಲುಗುಣ)ರು ಗೋಳಿಡುತ್ತಿರುವುದು.. ಪರಮಾತ್ಮನಿಗೆ ಇವುಗಳು ಹೊಸ ರುಚಿಯಾಗಿ ತೋರುತ್ತದೆ.

ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಈ ಪ್ರಪಂಚದಲ್ಲಿ ನಡೆಯುವ ಎಲ್ಲಾ ಆಗುಹೋಗುಗಳೂ ಆ ಭಗವಂತನಿಗೆ ಗೊತ್ತಿಲ್ಲದೇ ನಡೆಯುತ್ತಿರುವುದಿಲ್ಲ. ಸುಖ,ದುಃಖ,ಅಳು,ನಗು ಎಲ್ಲವೂ ಆ ಭಗವಂತನ ಲೀಲೆಯೇ.

No comments:

Post a Comment