Wednesday, September 25, 2013

ಲ್ಯುಕ್ರೀಷಿಯಸ್ಸಿನಾ ಪ್ರಕೃತಿಪ್ರಲಯವಾದ (503)

ಲ್ಯುಕ್ರೀಷಿಯಸ್ಸಿನಾ ಪ್ರಕೃತಿಪ್ರಲಯವಾದ |
ನ್ಯಕ್ಕೃತಾಕ್ಷಿಯವಾದ ವಿಸ್ಮೃತಾತ್ಮನದು ||
ಸ್ವೀಕೃತಾಮರ್ತ್ಯಾತ್ಮಪಾರಮ್ಯ ದೃಗ್ವಾದ |
ಸಾಕ್ರೆಟೀಸನವಾದ - ಮರುಳ ಮುನಿಯ || (೫೦3)

(ವಿಸ್ಮೃತ+ಆತ್ಮನದು)(ಸ್ವೀಕೃತ+ಅಮರ್ತ್ಯ+ಅತ್ಮ)

ಲ್ಯುಕ್ರೀಷಿಯಸ್ ಎಂಬಾತನು ಸುಮಾರು ಕ್ರಿ.ಪೂ. ೯೬-೫೫ರಲ್ಲಿ ಇದ್ದ ಲ್ಯಾಟಿನ ಕವಿ. ಎಪಿಕ್ಯೂರಸ್ ತತ್ತ್ವಜ್ಞನ ಪಂಥಕ್ಕೆ ಸೇರಿದವನು. ಆ ಪಂಥದ ವಿಚಾರಧಾರೆಯನ್ನು ತಿಳಿಸುವುದು ಇವನ De Return Natura ವಸ್ತು ಸ್ವಭಾವ ಅಥವಾ ಜಗತ್ಸ್ವಭಾವ ಎಂಬ ಪದ್ಯ ಕಾವ್ಯ.

"ಈ ಜಗತ್ತು ಕೇವಲ ಪರಮಾಣುಗಳ ಸಂಯೋಗ-ವಿಯೋಗಾದಿ ನಾನಾ ವಿಕಾರ ಪರಿಣಾಮಗಳಿಂದ ಉಂಟಾದದ್ದು. ಇದಕ್ಕೆ ಬೇರೆ ನಿಯಾಮಕನು ಯಾರೂ ಇರುವಂತಿಲ್ಲ. ಮನುಷ್ಯನು ಸಾಧಿಸಬಹುದಾದದ್ದು ಬಹು ಸ್ವಲ್ಪ. ಅವನ ಬುದ್ಧಿವಂತಿಕೆಯೇನಿದ್ದರೂ ಬಂದದ್ದನ್ನು ಸಹಿಸಿಕೊಂಡು ಶಾಂತಚಿತ್ತನಾಗಿರುವುದರಲ್ಲಿ. ಭೋಗವನ್ನು ಜೀವನದ ಪರಮಾರ್ಥವನ್ನಾಗಿ ಮಾಡಿಕೊಳ್ಳತಕ್ಕದ್ದಲ್ಲ. ನಾವು ಹುಡುಕಬೇಕಾದದ್ದು ಭೋಗವನ್ನಲ್ಲ; ಸಮಾಧಾನವನ್ನು. ಇದಕ್ಕಾಗಿ ಅತ್ಯಾಶೆಗಳನ್ನು ಅದುಮಬೇಕು. ರಾಗಾವೇಶಗಳನ್ನು ತಡೆಯಬೇಕು. ಕ್ಷುದ್ರದೈವಗಳ ಭೀತಿಯನ್ನು ನೀಗಬೇಕು. ಇಂದ್ರಿಯ ಸಂಯಮ, ಲಬ್ಧ ಸಂತೃಪ್ತಿ, ವಿರಕ್ತಭಾವ ಇದರಿಂದಲೇ ನಿಜವಾದ ಸುಖ"- ಇದು ಲ್ಯುಕ್ರೀಷಿಯಸ್‍ನ ಬೋಧೆ.

ನ್ಯಕ್ಕೃತಾಕ್ಷಿಯವಾದ: ನೃಕ್ಕೃತ ಕೆಳಗೆ (ಪಾದದಲ್ಲಿ) ಇರುವ ಕಣ್ಣು ಯಾರಿಗೋ ಅವನು ನ್ಯಕ್ಕೃತಾಕ್ಷಿ. ಅಕ್ಷಪಾದನೆಂಬ ಅಭಿಪ್ರಾಯ. ಈತನು ನ್ಯಾಯಶಾಸ್ತ್ರವನ್ನು ರಚಿಸಿದ ಗೌತಮಮಹರ್ಷಿ. ಲ್ಯುಕ್ರೀಷಿಯಸ್‍ನ ಸಿದ್ಧಾಂತದಂತೆ ನ್ಯಾಯಶಾಸ್ತ್ರವು ಪರಮಾಣುವಾದವನ್ನು ಮುಂದಿಡುತ್ತದೆ. ಆದರೆ ಜೀವಾತ್ಮ ಪರಮಾತ್ಮರನ್ನು ನ್ಯಾಯಶಾಸ್ತ್ರ ಅಂಗೀಕರಿಸುತ್ತದೆ. ಈ ಆಸ್ತೀತ್ವವನ್ನು ತೆಗೆದು ಹಾಕಿದರೆ ಅದು ಲ್ಯುಕ್ರೀಷಿಯಸ್‍ನ ವಾದವೇ ಆಗುತ್ತದೆ. ಸಾಕ್ರೆಟಿಸ್ ಎಂಬ ಗ್ರೀಕ ತತ್ತ್ವಜ್ಞಾನಿ ಅಮರನಾದ ಆತ್ಮನನ್ನು ಅಂಗೀಕರಿಸುತ್ತಾನೆ.

ಲ್ಯುಕ್ರೀಷಿಯಸ್‍ನ, ಪ್ರಕೃತಿ ಪ್ರಲಯಗಳು ಮಾತ್ರ ನಿಜ, ಪ್ರಪಂಚವೆಲ್ಲವೂ ಪರಮಾಣುಗಳ ಸಂಯೋಗ ಮತ್ತು ವಿಯೋಗದಿಂದಾದ್ದು, ಇದಕ್ಕೆ ಬೇರೆ ಯಾವ ನಿಯಾಮಕನೂ ಇರುವಂತಿಲ್ಲವೆನ್ನುವ ಒಂದು ಚರ್ಚೆ. ಪರಮಾಣುವಾದವನ್ನು ಮುಂದಿಟ್ಟರೂ ಜೀವಾತ್ಮ ಮತ್ತು ಪರಮಾತ್ಮನನ್ನು ಅಂಗೀಕರಿಸುವ ನ್ಯಾಯಶಾಸ್ತ್ರವನ್ನು ರಚಿಸಿದ ಗೌತಮ ಮಹರ್ಷಿಯ ವಾದ ಇನ್ನೊಂದು. ಅಮರನಾದ ಆತ್ಮವನ್ನು ಅಂಗೀಕರಿಸುವ ಸಾಕ್ರೆಟಿಸನ ಮತ್ತೊಂದು ತರ್ಕ. ಸೃಷ್ಟಿಯ ಮತ್ತು ಪ್ರಪಂಚದ ಬಗ್ಗೆ ಈ ಮೂರು ವಿಧವಾದ ಅಭಿಪ್ರಾಯಗಳಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Automatic creation and dissolution by atoms was the philosophy of Lucretiues
Nyakrutakshi advocated the existence of soul forgotten by Lucretiues
Immortality and supremacy of the soul
Was the philosophy of Socrates – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment