Thursday, June 23, 2011

ಜಾಗರೂಕತೆ ಸಹನೆ ಸದಸದ್ವಿವೇಕಮೀ (29)

ಜಾಗರೂಕತೆ ಸಹನೆ ಸದಸದ್ವಿವೇಕಮೀ |
ತ್ರೈಗುಣ್ಯ ನೀಗುವುದು ಬಹು ಕಷ್ಟಗಳನು ||
ಆಗದೊಡೆ ದೈವಕ್ಕೆ ತಲೆಬಾಗು ಶರಣೆಂದು |
ಬಾಗು ತಲೆಯನು ನಗುತ - ಮರುಳ ಮುನಿಯ || (೨೯)

(ಸತ್+ಆಸತ್+ವಿವೇಕಂ+) (ಶರಣು+ಎಂದು)

ಸದಾ ಜಾಗರೂಕನಾಗಿ ಎಚ್ಚರತಪ್ಪದಿರುವುದು, ಮಾಡುವ ಕೆಲಸ ಕಾರ್ಯಗಳನ್ನು ಸಹನೆಯಿಂದ ಮಾಡುವುದು ಮತ್ತು ಯಾವುದು ಒಳಿತು ಮತ್ತು ಯಾವುದು ಕೆಟ್ಟದ್ದು ಎನ್ನುವ ವಿವೇಚನೆಯನ್ನು ಬೆಳಸಿಕೊಳ್ಳುವುದು, ಈ ಮೇಲಿನ ಮೂರು ಸ್ವಭಾವ(ತ್ರೈಗುಣ್ಯ)ಗಳ ಅಭ್ಯಾಸದಿಂದ ನಾವು ನಮ್ಮ ಬಹುತೇಕ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಈ ರೀತಿಯ ಅಭ್ಯಾಸದಿಂದಲೂ ಕಾರ್ಯಸಿದ್ಧಿ ಆಗದಿದ್ದಲ್ಲಿ ಆ ದೈವಕ್ಕೆ ತಲೆಬಗ್ಗಿಸಿ ಮೊರೆಹೋಗು. ನಗುತ್ತಾ ತಲೆಯನ್ನು ಬಗ್ಗಿಸು.


 ಇಲ್ಲಿ ಮೊರೆಹೋಗು ಎಂದರೆ ನಿನ್ನಿಂದಾಗದ ಕೆಲಸವನ್ನು ದೇವರಲ್ಲಿ ಬೇಡು ಎನ್ನುವುದಲ್ಲ. ನಿನ್ನೆಲ್ಲಾ ಪ್ರಯತ್ನವೂ ವಿಫಲವಾಗಿ ಕಷ್ಟವು ನಿವಾರಣೆ ಆಗದಿದ್ದಾಗ, ’ನೋವ ನೀಂ ಪಡುವದೇ ದೈವೇಚ್ಛೆಎಂದುಕೊಂಡು ಆ ಕಷ್ಟವನ್ನು ಸಹಿಸಿಕೊಳ್ಳುತ್ತಾ, ನಗುತ್ತಾ ದೇವರ ಮುಂದೆ ಶರಣುಹೋಗು.

No comments:

Post a Comment