Monday, August 1, 2011

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ (46)

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ |
ಲೇಶದೊಳಗರಸುವೆಯ ರಾಶಿಯಮಿತವನು ? ||
ರಾಶಿಯೆಲ್ಲವ ಕಾಣ್ಬೊಡದರೊಳಗೆ ಕರಗಿ ಬೆರೆ |
ನಾಶವಕ್ಕೆ ಪೃಥಕ್ತ್ವ - ಮರುಳ ಮುನಿಯ || (೪೬)



‎(ಈಶನ+ಇಚ್ಛೆ)(ನೀನು+ಅದರ+ಒಳು+​ಒಂದು)(ಲೇಶದ+ಒಳಗೆ+ಅರಸುವೆಯ)
(ರಾಶಿಯ+ಅಮಿತವನು)(ಕಾಣ್ಬೊಡೆ+ಅ​ದರ+ಒಳಗೆ)

ಪರಮಾತ್ಮನ ಅಪೇಕ್ಷೆ(ಇಚ್ಛೆ)ಯಿಂದ ಈ ಬ್ರಹ್ಮಾಂಡ ಸಾಗರದ ನಿರ್ಮಾಣವಾಗಿದೆ. ನೀನು ಆ ಸಾಗರದ ಒಂದು ಸಣ್ಣ ಕಣ ಮಾತ್ರ. ಹೀಗಿರುವಾಗ, ಈ ಸ್ವಲ್ಪ(ಲೇಶ)ದರಲ್ಲಿ ನೀನು ರಾಶಿಯ ಅಪಾರತೆ(ಅಮಿತ)ಯನ್ನು ಹುಡುಕು(ಅರಸು)ವೆಯೇನು? ಇದು ಅಸಾಧ್ಯವಾದ ಕೆಲಸ. ನೀನಾದರೋ ಒಂದು ಕಣ. ಅದು ಅಪಾರ ರಾಶಿ. ಈ ಸಂಪೂರ್ಣ ರಾಶಿಯನ್ನು ಕಾಣಬೇಕೆಂದರೆ, ನೀನು ಅದರ ಒಳಗೆ ಕರಗಿ ಬೆರೆತು ಹೋಗು. ಯಾವಾಗ ನೀನು ಅದರ ಒಂದು ಭಾಗವಾಗುವೆಯೋ ಆವಾಗ ನೀನು ರಾಶಿಯ ಅಪಾರತೆಯನ್ನು ಕಾಣಲಿಕ್ಕಾಗುತ್ತದೆ. ಈ ಕರಗುವಿಕೆಯಲ್ಲಿ ನಿನಗೆ ಇನ್ನೂ ಒಂದು ಲಾಭ ಉಂಟು. ಅದು, ನಿನ್ನ ಅಹಂ ಮತ್ತು ಬೇರೆತನದ ಅರಿವು(ಪೃಥಕ್ತ್ವ) ನಾಶವಾಗಲಿಕ್ಕೆ ಕಾರಣವಾಗುತ್ತದೆ.

No comments:

Post a Comment