Wednesday, June 12, 2013

ಸುರರುಮಸುರರುಮೊಂದಿ ಕಡೆದ ಕಡಲಾವುದದು? (443)

ಸುರರುಮಸುರರುಮೊಂದಿ ಕಡೆದ ಕಡಲಾವುದದು? |
ಸುರೆಸುಧೆಗಳೆರಡರಲಿ ವಿಷಗಳೆರಡರಲಿ ||
ಬೆರೆತೆರಡ ಮನುಜ ಬೇರ್ಪಡಿಪ, ಮಂಥನಯಷ್ಟಿ |
ನರವಿವೇಕದ ಶಕ್ತಿ - ಮರುಳ ಮುನಿಯ || (೪೪೩)

(ಸುರರುಂ+ಅಸುರರುಂ+ಒಂದಿ)(ಕಡಲ್+ಆವುದು+ಅದು)(ಸುಧೆಗಳ್+ಎರಡರಲಿ)(ವಿಷಗಳ್+ಎರಡರಲಿ)(ಬೆರೆತು+ಎರಡ)

ದೇವದಾನವರು ಸೇರಿ ಕ್ಷೀರಸಮುದ್ರವನ್ನು ಕಡೆದರಷ್ಟೆ; ಅದರಿಂದ ಸುರೆ, ಅಮೃತ, ವಿಷ - ಈ ಮೂರು ಹುಟ್ಟಿದವು; ಕಡೆಯುವುದಕ್ಕೆ ಮೊದಲು ಇವು ಮೂರೂ ಕ್ಷೀರಸಮುದ್ರದಲ್ಲಿ ಒಂದುಗೂಡಿದ್ದವು. ಸುರೆಯೊಡನೆ ಅಮೃತವಿಷಗಳೂ ಅಮೃತದೊಡನೆ ಸುರೆವಿಷಗಳೂ ವಿಷದೊಡನೆ ಅಮೃತಸುರೆಗಳೂ ಸಮಿಶ್ರವಾಗಿದ್ದವು.

ದೇವತೆಗಳು ಮತ್ತು ದಾನವರೂ ಕೂಡಿ ಕಡೆದ ಸಮುದ್ರವು ಯಾವುದು? ಅದೇ ಕ್ಷೀರಸಮುದ್ರ. ಮದ್ಯ(ಸುರೆ) ಮತ್ತು ಅಮೃತಗಳೆರಡರಲ್ಲೂ, ಹಾಗೆಯೇ ಅವೆರಡರಲ್ಲೂ ವಿಷವೂ ಸೇರಿಕೊಂಡಿತ್ತು. ಇವುಗಳೆಲ್ಲವೂ ಸೇರಿರುವ ಮನುಷ್ಯನಲ್ಲಿ ಇವನ್ನು ಬೇರೆ ಮಾಡುವ ಕಡೆಗೋಲಿನ ದಾರ (ಮಂಥನಯಷ್ಟಿ) ಮನುಷ್ಯನ ಯುಕ್ತಾಯುಕ್ತ ವಿವೇಚನೆಯೆಂಬ (ವಿವೇಕ) ಶಕ್ತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is the ocean that gods and demons jointly churned?
Both ambrosia and liquor surfaced but mixed with deadly poison
The churning rod to separate the two in the mixture
Is the power of discrimination in man – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment