Tuesday, May 17, 2011

ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ (10)


ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |
ಮನನಾನುಸಂಧಾನಕಾದುದೀ ಕಗ್ಗ ||
ನೆನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ |
ಅನುಭವಿಸಿ ಚಪ್ಪರಿಸೊ - ಮರುಳ ಮುನಿಯ || (೧೦)


(ಮನನ+ಅನುಸಂಧಾನಕೆ+ಅದುದು+ಈ)(ನೆನೆನೆನೆಯುತ+ಒಂದು+ಒಂದು) (ಪದ್ಯವನು+ಅದು+ಒಮ್ಮೊಮ್ಮೆ)

ಹಿಂದಿನ ಕಗ್ಗದಲ್ಲಿ ಈ ಕಗ್ಗಗಳು ಬಾಯ್‍ಚಪಲಕ್ಕೋಸ್ಕರ ಬೆಳೆದದ್ದು ಎಂದು ಹೇಳಿದ ಮಾತ್ರಕ್ಕೆ ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಇದು ಒಂದು ವಿನೋದ(ಬಿನದ) ಕಥೆಯಲ್ಲ. ಹೃದಯದ ರಸವು ಬೆಟ್ಟದಿಂದ ಹರಿದು ಬರುತ್ತಿರುವ ಪ್ರವಾಹದಂತೆ (ನಿರ್ಝರಿ) ಹರಿದು ಬರುತ್ತಿರುವುದೋ ಅಲ್ಲ. ಚಿಂತನೆ (ಮನನ) ಮತ್ತು ಅನುಸರಿಸು (ಅನುಸಂಧಾನ)ವುದಕ್ಕಾಗಿ ಈ ಕಗ್ಗವನ್ನು ಬರೆಯಲಾಗಿದೆ. ಆದುದ್ದರಿಂದ ಒಂದೊಂದು ಪದ್ಯವನ್ನು ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾ, ಬಾಯಲ್ಲಿ ಚಪ್ಪರಿಸು. ಆವಾಗಲೇ ಅವುಗಳ ಸ್ವರಸ್ಯದ ಅರಿವು ನಿನಗೆ ಉಂಟಾಗುತ್ತದೆ.

No comments:

Post a Comment